ಮಕ್ಕಳ ಕವನ:- ಮಾಗಿಯ ಚಳಿ
~~~~~~~~~~~~~~~~~
ಮಾಗಿಯ ಕಾಲ ಬಂತು ಬಂತು
ಮೈತುಂಬ ಚಳಿಯ ತಂತು ತಂತು
ಗಡ ಗಡ ನಡುಗುವ ಚಳಿಯ ಕಳೆಯಲು
ಆಗದೆ ಹೋದನು ಸೂರ್ಯನೆ ಸೋತು
ರಾತ್ರಿಯ ಕಳೆಯಲು ಕಂಬಳಿ ಬೇಕು
ಹಗಲಲಿ ಉಣ್ಣೆಯ ಬಟ್ಟೆಯು ಬೇಕು
ಬೆಳಗಿನ ಚಳಿಯನು ನೀಗಿಸಿಕೊಳ್ಳಲು
ಬೆಂಕಿಯ ಬಿಸಿಯು ತಾಗಲೆಬೇಕು
ತಣ್ಣೀರು ಬಳಸಿ ಮುಖವ ತೊಳೆದರೆ
ದೇಹವು ಥರಗುಟ್ಟಿ ಹೋಗುವುದು
ಬಿಸಿನೀರ ಬಳಸುವ ಎಂದುಕೊಂಡರೆ
ಉರುವಲು ನಕಾರ ಮಾಡುವುದು
ಶೀತದ ಗಾಳಿಯು ಎಲ್ಲೆಡೆ ಹರಡಿ
ನೆಗಡಿ ಕೆಮ್ಮನು ಕರೆತರುವುದು
ಸೊರ ಸೊರ ಅನ್ನುವ ಮೂಗನು ಕಂಡು
ನೋಡಲು ಅಸಹ್ಯ ಅನಿಸುವುದು
ಬೆವರು ಬಾರದೆ ಚರ್ಮದ ಕಾಂತಿಯು
ಕ್ಷೀಣಿಸಿ ಕೆಡುವುದು ಸೌಂದರ್ಯ
ಚಳಿಗಾಲದ ಈ ವೈಪರೀತ್ಯಗಳ
ಸಹಿಸಿಕೊಳ್ಳುವುದು ಅನಿವಾರ್ಯ
÷÷÷÷÷÷÷
~ಹೊ.ರಾ.ಪರಮೇಶ್ ಹೊಡೇನೂರು
ಶಿಕ್ಷಕರು/ಮಕ್ಕಳ ಸಾಹಿತಿ
ಅರಕಲಗೂಡು ತಾ. ಹಾಸನ ಜಿಲ್ಲೆ
#9481816820
ಆಡಿಯೋ ಲಿಂಕ್



